“ಪಿಡಿಐಟಿಯಲ್ಲಿ ೨೫ನೇ ನೂತನ ಬಿ.ಇ. ಬ್ಯಾಚ್ ಪ್ರಾರಂಭೋತ್ಸವ”
ದಿನಾಂಕ: 22 /12 /2021
ವಿದ್ಯಾರ್ಥಿದೆಸೆಯಿಂದಲೇ ಶಿಸ್ತು ಹಾಗೂ ಸಮಯ ಪಾಲನೆಯ ಮಹತ್ವವನ್ನು ಅರಿತು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉನ್ನತ ಯಶಸ್ಸನ್ನು ಪಡೆಯಲು ಸಾಧ್ಯವೆಂದು ಬೆಂಗಳೂರಿನ ಬಿ.ಎಂ.ಎಸ್ ಆರೋಗ್ಯ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಪ್ರೊ. ಎಂ. ಆರ್. ಭಗವಾನ್ ಸಿಂಗ್ ಅಭಿಪ್ರಾಯ ಪಟ್ಟರು.
ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ 2021ನೇ ಸಾಲಿನ ೨೫ನೇ ನೂತನ ಬಿ.ಇ. ಬ್ಯಾಚ್ ತರಗತಿಗಳ ಪ್ರಾರಂಭೋತ್ಸವ ‘ಶುಭಾರಂಭ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸಾಧನೆಗೆ ವಿದ್ಯಾರ್ಥಿಗಳ ಪ್ರತಿಭೆ ಅಗತ್ಯ, ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಶಿಕ್ಷಣ ಮುಂದುವರೆಸುವಂತೆ ಸಲಹೆ ನೀಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ದೊರಕಲು ವೀರಶೈವ ವಿದ್ಯಾವರ್ಧಕ ಸಂಘ ಸ್ವತಂತ್ರ ಪೂರ್ವದಿಂದಲೂ ಶಿಕ್ಷಣ ಒದಿಗಿಸುತ್ತ ಬಂದಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಯ ಸಕಲ ಸೌಕರ್ಯಗಳನ್ನು ಸಂಸ್ಥೆ ಒದಗಿಸಲಿದೆಯಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಎಚ್.ಎಂ.ಗುರುಸಿದ್ದಸ್ವಾಮಿ ಹೇಳಿದರು.
ಸಮಾರಂಭದಲ್ಲಿ ಈ ಶೈಕ್ಷಣಿಕ ವರ್ಸದಲ್ಲಿ ಕಾಲೇಜು ಕ್ಯಾಂಪಸ್ ಪ್ಲೇಸ್ಮೆಂಟ್ ಮೂಲಕ ಆಯ್ಕೆಯಾಗಿ ಹೆಸರಾಂತ ಕಂಪೆನಿಗಳಲ್ಲಿ ಕೆಲಸಮಾಡುತ್ತಿರುವ ಹಲವಾರು ವಿದ್ಯಾರ್ಥಿಗಳು ತಮ್ಮ ಅನುಭವ ಮತ್ತು ಸಲಹೆ ಸೂಚನೆಗಳನ್ನು ಕಿರಿಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಇದೆ ಸಂದರ್ಭದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಹಿಂದಿನ ವರ್ಷದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೀ.ವಿ. ಸಂಘದ ಉಪಾಧ್ಯಕ್ಷರಾದ ಶ್ರೀ ಅಲ್ಲಂ ಚನ್ನಪ್ಪ, ಕಾರ್ಯದರ್ಶಿಗಳಾದ ಶ್ರೀ ಬಿ.ವಿ ಬಸವರಾಜ್, ಸಹಕಾರ್ಯದರ್ಶಿ ಶ್ರೀ ದರೂರ್ ಶಾಂತನಗೌಡ, ಹಾಗೂ ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಪಲ್ಲೇದ್ ದೊಡ್ಡಪ್ಪ, ವೀ ವೀ ಸಂಘದ ಅಜೀವ ಸದಸ್ಯರು, ಪ್ರಾಂಶುಪಾಲರಾದ ಡಾ. ಎಸ್.ಎಂ.ಶಶಿಧರ್, ಉಪ ಪ್ರಾಶುಪಾಲರಾದ ಡಾ. ಯು ಎಂ. ರೋಹಿತ್, ಪ್ರಥಮ ವರ್ಷದ ಸಂಚಾಲಕರಾದ ಡಾ. ಜೆ.ನಿಜಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
ಡಾ. ನಾಗರಾಜ ಸ್ವಾಗತಿಸಿದರು. ಕು. ಸಂಗೀತ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು.ಡಾ. ಶರಣಬಸಮ್ಮ ಪ್ರಥಮ ವರ್ಷದ ತರಗತಿಗಳ ಬಗ್ಗೆ ಮಾಹಿತಿ ನೀಡಿದರು ಪ್ರೊ. ಇಂದಿರಾ ನಿರೂಪಿಸಿದರು. ಪ್ರೊ. ಮಹೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪಾಲ್ಗೊಂಡಿದ್ದರು.