“ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ, ದಾನದಿಂದಲೇ ಪಡೆಯಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಎಲ್ಲರೂ ಕೈ ಜೋಡಿಸಿ ರಕ್ತದಾನದ ಮೂಲಕ ಜೀವದಾನಕ್ಕೆ ಮುಂದಾಗಬೇಕು” ಎಂದು ವಿಜಯನಗರ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಭಯ್ಯ ಅಭಿಪ್ರಾಯಪಟ್ಟರು.
ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಘಟಕ, ರೆಡ್ ಕ್ರಾಸ್ ಸಂಸ್ಥೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿಮ್ಸ್ ಬಳ್ಳಾರಿ ಹಾಗೂ ಹೊಸಪೇಟೆಯ ನೂರು ಹಾಸಿಗೆಗಳ ಸರಕಾರೀ ಆಸ್ಪತ್ರೆ ಜಂಟಿಯಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ರಕ್ತದಾನದ ಬಗ್ಗೆ ಬಹಳಷ್ಟು ಜನರಿಗೆ ಅನಗತ್ಯ ಭಯ, ತಪ್ಪು ತಿಳಿವಳಿಕೆಗಳೇ ಹೆಚ್ಚು. ಆದರೆ ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಲ್ಲ, ರಕ್ತದಾನಿಗಳೂ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತ ಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ, ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ, ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗುತ್ತದೆ, ಆತ ಇನ್ನಷ್ಟು ಆರೋಗ್ಯವಂತನಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಎಂ.ಶಶಿಧರ್ ಅವರು ಮಾತನಾಡಿ,” ರಕ್ತವು ಆಧುನಿಕ ಸಂಜೀವಿನಿ, ಅಮೃತವಾಗಿದ್ದು ನಿಸ್ವಾರ್ಥತೆಯಿಂದ ಮಾನವನ ನೆರವಿಗೆ ಧಾವಿಸುವ ಉದಾರ ಮನೋಭಾವ ಬೆಳೆಸಿಕೊಳ್ಳಬೇಕು” ಎಂದರು.
2019 ರಲ್ಲಿ ಪುಲ್ವಾಮಾ ದುರಂತದಲ್ಲಿ ನಮ್ಮ ವೀರ ಸೈನೀಕರ ಮರಣ ಸಂಭವಿಸಿತ್ತು. ಆ ತ್ಯಾಗವನ್ನು ನೆನಪಿಸಲು ಈ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಎಬಿವಿಪಿ ಘಟಕದ ಸಂಚಾಲಕ ರೇಣುಕಪ್ಪ ಚೌಡಿಕಿ ತಿಳಿಸಿದರು.
ನೂರು ಹಾಸಿಗೆ ಆಸ್ಪತ್ರೆಯ ಸರ್ಜನ್ ಡಾ. ಸೋಮಶೇಖರ್, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ರಾವ್, ರೇಖಾ ಪ್ರಕಾಶ್, ಅನ್ನಪೂರ್ಣ ಸದಾಶಿವ ಮೂರ್ತಿ, ಎಬಿವಿಪಿ ನಗರಾಧ್ಯಕ್ಷ ಜಿತೇಂದ್ರ, ಪಿಡಿಐಟಿಯ ಎನ್.ಎಸ್.ಎಸ್. ಘಟಕದ ನವೀನ್ ಆರ್, ರೆಡ್ ಕ್ರಾಸ್ ಘಟಕದ ನವೀನ್ ಎಸ್. ಮುಂತಾದವರು ಉಪಸ್ಥಿತರಿದ್ದರು.