ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನಪಟ್ಟರೆ ಮಹತ್ತರವಾದ ಸಾಧನೆಯನ್ನು ಮಾಡಬಹುದು ಎಂದು ಕೆ.ಎ.ಎಸ್ ಪರೀಕ್ಷೆಯಲ್ಲಿ ೩೬ ನೇ ರ್ಯಾಂಕ್ ಪಡೆದು ತೇರ್ಗಡೆಯಾಗಿರುವ ಪಿಡಿಐಟಿ ಕಾಲೇಜಿನ ಹಿಂದಿನ ವಿದ್ಯಾರ್ಥಿನಿ ಕಾವ್ಯಾರಾಣಿ ಕೆ.ವಿ. ಅಭಿಪ್ರಾಯಪಟ್ಟರು.
ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ತರಗತಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಕೆ.ಏ.ಎಸ್. ಪರೀಕ್ಷೆಯ ತಯಾರಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ದಿನಪತ್ರಿಕೆಗಳ ನಿರಂತರ ಓದು, ಸಂಗ್ರಹ ಅತ್ಯಮೂಲ್ಯ; ಸಣ್ಣ ಸಣ್ಣ ಸಂಗತಿಗಳ ಬಗ್ಗೆ ವಿದ್ಯಾರ್ಥಿಗಳು ಗಮನವಿರಿಸಿಕೊಳ್ಳಬೇಕು. ವಿಷಯದ ಅಧ್ಯಯನದಲ್ಲಿ ವೈವಿಧ್ಯತೆ ಹಾಗೂ ಆಯ್ಕೆಯಲ್ಲಿ ವಿದ್ಯಾರ್ಥಿಗಳು ಎಚ್ಚರವಹಿಸಿದಲ್ಲಿ ಮೌಖಿಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುತ್ತದೆ. ಹೆಣ್ಣುಮಕ್ಕಳನ್ನು ಪದವಿ ಮುಗಿಯುತ್ತಲೇ ಮದುವೆ ಮಾಡಿ ಕಳಿಸಬೇಕು ಎಂದು ಯೊಚಿಸದೇ ಅವರಲ್ಲೂ ಇರುವ ಮಹತ್ವಾಕಾಂಕ್ಷೆಗಳಿಗೆ ಪೋಷಕರು ನೀರೆರೆದು ಪೋಷಿಸಬೇಕು ಎಂದು ಹೇಳಿದರು.
ಸಾಮಾಜಿಕ ಸೇವಾ ಮನೋಭಾವ ಆಡಳಿತ ಸೇವೆಯಲ್ಲಿ ಅತ್ಯವಶ್ಯ; ಸಾಮಾಜಿಕ ಸೇವೆಯಲ್ಲಿ ನಾಲ್ಕು ವಿಧಗಳು, ಶೂದ್ರ ಸೇವೆ ಎಂದರೆ ಜನಸಾಮಾನ್ಯರಿಗೆ ಕಾಯಿಕವಾಗಿ ಸಲ್ಲಿಸುವ ಸೇವೆ, ವೈಶ್ಯ ಸೇವೆ ಎಂದರೆ ಧನಸಹಾಯ ಮಾಡುವುದು, ಕ್ಷತ್ರಿಯ ಸೇವೆ ಎಂದರೆ ಪ್ರಜೆಗಳಿಗೆ ಧೈರ್ಯ ಹಾಗೂ ಬಲಪ್ರದರ್ಶನ ಮೂಲಕ ಮಾನಸಿಕ ಸ್ಥೈರ್ಯವನ್ನು ತುಂಬುವುದು ಮತ್ತು ವಿಪ್ರಯೋಜಿತ ಸೇವೆ ಎಂದರೆ ಜ್ಞಾನಾರ್ಜನೆಯಿಂದ ತಿಳಿವಳಿಕೆ ನೀಡುವ ವಿದ್ಯಾದಾನ ಮಾಡುವುದು ಎಂದು ಹೇಳಿದರು.
ಪ್ರಾಚಾರ್ಯರಾದ ಡಾ. ಎಸ್.ಎಂ. ಶಶಿಧರ್ ಅವರು ಮಾತನಾಡಿ ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಪರಿಣಿತಿಯೊಂದಿಗೆ ಆಡಳಿತ ಸೇವೆಯ ಅವಕಾಶ ಪಡೆದರೆ ದೇಶದ ಪ್ರಗತಿ ಪಯಣದಲ್ಲಿ ಮುಖ್ಯ ಪಾತ್ರ ವಹಿಸಬಹುದು ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಕಾವ್ಯಾರಾಣಿ ಅವರನ್ನು ಸನ್ಮಾನಿಸಲಾಯಿತು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶರಣಬಸಮ್ಮ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸಂಚಾಲಕರಾದ ಡಾ. ನಿಜಲಿಂಗಪ್ಪ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ ಕಾವ್ಯಾರಾಣಿ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.